Sunday, 25 March 2018

ಕರ್ನಾಟಕವನ್ನಾಳಿದ ಕೆಲವು ರಾಜ ಮನೆತನಗಳು:- ಮೌರ್ಯರು.

ಮೌರ್ಯರು :-
              ಕ್ರಿ. ಪೂ. ೩೨೩ರಲ್ಲಿ ನಂದರನ್ನು ಸೋಲಿಸಿ ಮೌರ್ಯ ಸಾಮ್ರಾಜ್ಯಕ್ಕೆ ಅಸ್ತಿಭಾರವನ್ನು ಹಾಕಿದ ಚಂದ್ರಗುಪ್ತ ಮೌರ್ಯನು, ನಂದರ ವಶದಲ್ಲಿದ್ದ ದಕ್ಷಿಣ ಭಾರತದ ಭೂಭಾಗಗಳನ್ನು ತನ್ನ ವಶಕ್ಕೆ ತೆಗೆದುಕೊಂಡನು. ಚಂದ್ರಗುಪ್ತನು ತನ್ನ ಜೀವನದ ಕೊನೆಯ ಕಾಲವನ್ನು ಶ್ರವಣಬೆಳಗೊಳದಲ್ಲಿ ಕಳೆದನು ಎಂದು ಜೈನ ಇತಿಹಾಸವು ತಿಳಿಸುತ್ತದೆ. ಚಂದ್ರಗುಪ್ತನ ನಂತರ ಕ್ರಿ. ಪೂ. ೨೯೮ ರಲ್ಲಿ ಬಂದ ಬಿಂದುಸಾರನು ಮೈಸೂರು ಹಾಗೂ ಕೊಡಗಿನ ಕೆಲವು ಪ್ರದೇಶಗಳನ್ನು ಯುಧ್ಧದಲ್ಲಿ ಗೆದ್ದು ವಶಪಡಿಸಿಕೊಂಡನು.
               ಕರ್ಣಾಟಕದ ಹಲವಾರು ಭಾಗಗಳಲ್ಲಿ ದೊರೆತಿರುವ ಶಿಲಾ ಶಾಸನಗಳು ಕರ್ನಾಟಕದ ಬಹುತೇಕ ಭಾಗ ಅಶೋಕನ ಅಧೀನಕ್ಕೊಳಪಟ್ಟಿತ್ತು ಎಂದು ಸಾರುತ್ತವೆ. ಅಶೋಕನ ಬಗ್ಗೆ ತಿಳಿಯಲು ಅವನ ಆ ಶಾಸನಗಳೇ ಆಧಾರವಾಗಿವೆ. ಅಶೋಕನ ಶಿಲಾಶಾಸನಗಳು ದೊರೆತಿರುವ ಕರ್ನಾಟಕದ ಸ್ಥಳಗಳೆಂದರೆ- ೧೮೯೨ ರಲ್ಲಿ ಬಿ. ಎಲ್. ರೈಸ್ ಚಿತ್ರದುರ್ಗ ಜಿಲ್ಲೆಯ ಜಟಿಂಗ ರಾಮೇಶ್ವರ, ಬ್ರಹ್ಮಗಿರಿ ಮತ್ತು ಸಿದ್ಧಾಪುರಗಳಲ್ಲಿ ಶೋಧಿಸಿದ ಶಾಸನಗಳು, ೧೯೧೫ರಲ್ಲಿ ಬೇಡನ್ ಎಂಬ ಇಂಜಿನಿಯರ್ ರಾಯಚೂರು ಜಿಲ್ಲೆಯ ಮಸ್ಕಿ ಎಂಬಲ್ಲಿ ಶೋಧಿಸಿದ ಶಾಸನ, ೧೯೩೧ರಲ್ಲಿ ನಾರಾಯಣರಾವ್ ಶಾಸ್ತ್ರಿ ಮತ್ತು ಯಾಜ್ದಾನಿ ಎಂಬುವರು ರಾಯಚೂರು ಜಿಲ್ಲೆಯ ಇನ್ನೆರಡು ಸ್ಥಳಗಳಾದ ಗವಿಮಠ ಹಾಗೂ ಪಾಲ್ಕಿಗುಂಡದಲ್ಲಿ ಶೋಧಿಸಿದ, ೧೯೭೭ ಮತ್ತು ೧೯೭೮ರಲ್ಲಿ ಕ್ರಮವಾಗಿ ಬಳ್ಳಾರಿ ಜಿಲ್ಲೆಯ ನಿಟ್ಟೂರು (೨ ಶಾಸನಗಳು) ಮತ್ತು ಉದೇಗೊಳ್ಳಂನಲ್ಲಿ ಶೋಧಿಸಲ್ಪಟ್ಟ ಶಾಸನಗಳು ಹಾಗೂ ೧೯೮೯ರಲ್ಲಿ ಹೈದರಾಬಾದ್ ವಲಯದ ಸರ್ವೇಕ್ಷಣ ಇಲಾಖೆಯವರಿಂದ ಶೋಧಿಸಲ್ಪಟ್ಟ ಗುಲ್ಬರ್ಗ ಜಿಲ್ಲೆಯ ಸನ್ನತಿಯಲ್ಲಿನ ಶಾಸನಗಳು. ಕ್ರಿ. ಪೂ. ೧೮೭ರ ಸುಮಾರಿಗೆ ಮೌರ್ಯರ ಆಳ್ವಿಕೆ ಕೊನೆಗೊಂಡಿತು ಎಂದು ಊಹಿಸಲಾಗಿದೆ.

No comments:

Post a Comment