Sunday, 25 March 2018

ಬನವಾಸಿಯ ಕದಂಬರು (ಕ್ರಿ. ಶ. ೩೪೫-೫೪೦)

           ಶಾತವಾಹನರ ಅವನತಿಯ ನಂತರ ಕರ್ನಾಟಕದಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಿ ಕದಂಬರು ಕ್ರಿ. ಶ. ೪ನೇ ಶತಮಾನದಿಂದ ೬ನೇ ಆಳ್ವಿಕೆ ನಡೆಸಿದರು. ಇವರ ರಾಜಧಾನಿ ಮಹಾಭಾರತದಲ್ಲಿ "ವನವಾಸ" ಅಥವಾ "ವೈಜಯಂತಿ" ಎಂದು ಕರೆಯಲ್ಪಟ್ಟ ಉತ್ತರ ಕನ್ನಡ ಜಿಲ್ಲೆಯ "ಬನವಾಸಿ"ಯಾಗಿತ್ತು. ಬನವಾಸಿಯ ಕದಂಬರು 'ಸಿಂಹಲಾಂಛನ' ಮತ್ತು 'ವಾನರಧ್ವಜ'ಗಳನ್ನು ಹೊಂದಿದ್ದರು. ಕದಂಬರ ಮೂಲವನ್ನು ತಿಳಿಸುವ ಪ್ರಮುಖ ಶಾಸನವಾದ ಶಿವಮೊಗ್ಗ ಜಿಲ್ಲೆಯ ತಾಳಗುಂದದ ಶಾಸನದ ಪ್ರಕಾರ ಇವರು ಮಾನವ್ಯ ಗೋತ್ರಕ್ಕೆ ಸೇರಿದ ಹಾರೀಪುತ್ರನೆಂಬ  ಸನಾತನ ಬ್ರಾಹ್ಮಣ ಕುಟುಂಬದವರಾಗಿದ್ದಾರೆ.
              ಬಂದುಷೇಣನ ಮಗನಾದ ಮಯೂರವರ್ಮನು ಕದಂಬ ವಂಶದ ಸ್ಥಾಪಕ. ಮಯೂರವರ್ಮನು ತನ್ನ ವಿದ್ಯಾಭ್ಯಾಸಕೆಂದು ಪಲ್ಲವರ ರಾಜಧಾನಿ ಕಂಚಿಯ ಘಟಿಕಾಸ್ಥಾನಕ್ಕೆ ಹೋದಾಗ, ಅಲ್ಲಿ ಪಲ್ಲವರಿಂದ ಅವಮಾನಕ್ಕೀಡಾದನು. ಆ ಸೇಡಿಗೋಸ್ಕರ ಪಲ್ಲವರನ್ನು ಸೋಲಿಸಿ, ಸಾಮ್ರಾಜ್ಯ ಸ್ಥಾಪನೆ ಮಾಡಿದನು ಎಂಬ ನಂಬಿಕೆಯಿದೆ. ಇವನು ಕ್ರಿ. ಶ. ೩೪೫ ರಿಂದ ಕ್ರಿ. ಶ. ೩೬೦ ರವರೆಗೆ ರಾಜ್ಯಭಾರ ಮಾಡಿದನು. ಮಯೂರವರ್ಮನ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ ಮುಂತಾದವರು ಅಧಿಕಾರ ನಡೆಸಿದರು. ಕಾಕುತ್ಸ್ಥವರ್ಮ (ಕ್ರಿ. ಶ. ೪೦೫-೪೩೦) ಎಂಬುವವನು ಕದಂಬರ ಮತ್ತೊಬ್ಬ ಖ್ಯಾತ ದೊರೆ. ಇವನ ಕಾಲದಲ್ಲಿ ಕೆತ್ತಿಸಿದ  ಹಲ್ಮಿಡಿ ಶಾಸನವು ಕನ್ನಡದ ಮೊದಲ ಶಾಸನವಾಗಿದೆ. ಕಾಕುತ್ಸ್ಥವರ್ಮನ ನಂತರ ಕದಂಬರ ರಾಜ್ಯವು ಎರಡು ಹೋಳಾಯಿತು. ಇವನ ಮಗ ಶಾಂತಿವರ್ಮನು ಬನವಾಸಿಯನ್ನ ರಾಜಧಾನಿಯನ್ನಾಗಿ ಮಾಡಿಕೊಂಡರೆ, ಇನ್ನೊಬ್ಬ ಮಗ ಕೃಷ್ಣ ವರ್ಮನು ಶ್ರೀ ಪರ್ವತ (ಹಳೇಬೀಡು) ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು. ಶಾಂತಿವರ್ಮನ ಮಗನಾದ ಮೃಗೇಶವರ್ಮನು(ಕ್ರಿ. ಶ. ೪೭೫-೪೯೦) ಪಲ್ಲವರನ್ನು ಹತ್ತಿಕ್ಕಿದನಲ್ಲದೆ ದಕ್ಷಿಣ ಗಂಗರ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ, ಹಲಸಿ(ಬೆಳಗಾವಿ)ಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು. ಈತನಿಗೆ ಶ್ರೀ ವಿಜಯ, ಶ್ರೀ ಮೃಗೇಶ ಮುಂತಾದ ಹೆಸರುಗಳಿದ್ದವು. ಕದಂಬರು ಕನ್ನಡ ನಾಡಿನ ಹಲವಾರು ಭಾಗಗಳನ್ನು ಸುಮಾರು ೨೩೫ ವರ್ಷಗಳ ಕಾಲ ಆಳಿದರು. ಇವರು ಮೊದಲ ಕನ್ನಡ ರಾಜವಂಶದವರಾಗಿದ್ದಾರೆ. ಹಲಸಿಯ ಜೈನ ಬಸದಿ, ಕಲ್ಲೇಶ್ವರ, ಸುವರ್ಣೇಶ್ವರ ಮತ್ತು ಹತ್ತಿಕೇಶ್ವರ ದೇವಾಲಯಗಳು, ಬನವಾಸಿಯ ಮಧುಕೇಶ್ವರ ದೇವಾಲಯ, ವರಾಹ ನರಸಿಂಹ ದೇವಾಲಯಗಳು, ಬನವಾಸಿಯ ಮಧುಕೇಶ್ವರ ದೇವಾಲಯ, ವರಾಹ ನರಸಿಂಹ ದೇವಾಲಯಗಳು, ಗೋವಾದಲ್ಲಿನ ಬೈರವನ ಬೃಹತ್ ವಿಗ್ರಹ, ಗುಡ್ನಾಪುರದ ಜೈನ ಬಸದಿ ಮುಂತಾದವು ಕದಂಬರ ಕಾಲದ ನಿರ್ಮಾಣಗಳೇ ಆಗಿವೆ.

No comments:

Post a Comment