Tuesday, 20 March 2018

ಕರ್ನಾಟಕದ ಪ್ರಮುಖ ಬೆಟ್ಟಗಳು

೧) ನಂದಿ ಬೆಟ್ಟ: ಇದು ಕೋಲಾರ ಜಿಲ್ಲೆಯ, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿದ್ದು, ಸಮುದ್ರಮಟ್ಟದಿಂದ ೧,೪೭೮ ಮೀ ಎತ್ತರದಲ್ಲಿದೆ. ಬ್ರಿಟಿಷ್ ಕ್ಯಾಪ್ಟನ್ ಕನಿಂಗ್ ಹಾಂನಿಂದ ನಿರ್ಮಿತವಾದ '' ಓಕ್ ಲ್ಯಾಂಡ್ " ಕಟ್ಟಡ ಇಲ್ಲಿದೆ. ಮಹಾತ್ಮ ಗಾಂಧೀಜಿಯವರು ಕರ್ನಾಟಕಕ್ಕೆ ಭೇಟಿ ಕೊಟ್ಟಾಗ ಈ ಕಟ್ಟಡದಲ್ಲಿ ತಂಗಿದ್ದರು. ಹಾಗಾಗಿ ಇದಕ್ಕೆ '' ಗಾಂಧಿ ನಿಲಯ" ಎಂದು ಕರೆಯಲಾಗುತ್ತದೆ. ನಂದಿ ಬೆಟ್ಟದಿಂದ ಚಿತ್ರಾವತಿ, ಅರ್ಕಾವತಿ, ಪಾಪಾಗ್ನಿ ಮತ್ತು ಪಿನಾಕಿನಿ ನದಿಗಳು ಹುಟ್ಟುತ್ತವೆ.

೨)ಬಾಬಾಬುಡನಗಿರಿ: ಇದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಯಲ್ಲಿದ್ದು, ಸಮುದ್ರಮಟ್ಟದಿಂದ ೧,೮೯೪ ಮೀ ಎತ್ತರದಲ್ಲಿದೆ. ಈ ಗಿರಿಯಲ್ಲಿ  ದಾದ ಹಯಾತ್ ಖಲಂದರ್ ಎಂಬ ಸಂತನ 'ದರ್ಗಾ' ಮತ್ತು 'ದತ್ತಪೀಠ'ಗಳು ಇವೆ. ತೀರಾ ಇತ್ತೀಚಿನವರೆಗೂ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಈ ಗಿರಿ, ಈಗ ವಿವಾದದಲ್ಲಿದೆ.

೩)ಬಿಳಿಗಿರಿರಂಗನಬೆಟ್ಟ: ಈ ಬೆಟ್ಟವು  ಚಾಮರಾಜನಗರ ಜಿಲ್ಲೆಯ, ಯಳಂದೂರು ತಾಲ್ಲೂಕಿನಲ್ಲಿದ್ದು, ರಂಗನಾಥ ಸ್ವಾಮಿ ದೇವಸ್ಥಾನ, ಸ್ವಾಮಿ ನಿರ್ಮಲಾನಂದರು  ಸ್ಥಾಪಿಸಿದ ವಿಶ್ವಶಾಂತಿ ಆಶ್ರಮ ಹಾಗೂ ಹೆಸರಾಂತ ಸಮಾಜ ಸೇವಕ ಡಾ. ಸುದರ್ಶನರವರು ಸ್ಥಾಪಿಸಿರುವ ' ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ,' ಗಳಿಗೆ ಆಶ್ರಯ ನೀಡಿದೆ.

೪) ಮಲೈ ಮಹದೇಶ್ವರ ಬೆಟ್ಟ: '' ಏಳು ಮಲೆ " ಎಂದು ಕರೆಯಲ್ಪಡುವ ಮಲೈ ಮಹದೇಶ್ವರ ಬೆಟ್ಟವು ಚಾಮರಾಜನಗರದ ಜಿಲ್ಲೆಯ, ಕೊಳ್ಳೇಗಾಲ ತಾಲ್ಲೂಕಿನಲ್ಲಿದೆ. ಸಂಪದ್ಭರಿತ ಅರಣ್ಯ ಆವರಿಸಿರುವ ಈ ಬೆಟ್ಟದ ಮೇಲೆ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನವಿದೆ.

೫) ಗೋಪಾಲಸ್ವಾಮಿ ಬೆಟ್ಟ: ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿದ್ದು, ಸಮುದ್ರಮಟ್ಟದಿಂದ ಸುಮಾರು ೧,೪೪೬ ಮೀ ಎತ್ತರದಲ್ಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿರುವ ಈ ಬೆಟ್ಟದ ಮೇಲೆ ಶ್ರೀ ಗೋಪಾಲಸ್ವಾಮಿ ದೇವಸ್ಥಾನವಿದೆ.

೬) ಮುಳ್ಳಯ್ಯನಗಿರಿ: ಕರ್ನಾಟಕದ ಅತ್ಯಂತ ಎತ್ತರವಾದ ಶಿಖರವಾದ ಮುಳ್ಳಯ್ಯನಗಿರಿಯು ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದು, ಸಮುದ್ರಮಟ್ಟದಿಂದ ಸುಮಾರು ೧,೯೨೫ ಮೀ ಎತ್ತರದಲ್ಲಿದೆ.

೭)ಚಾಮುಂಡಿಬೆಟ್ಟ: ಮೈಸೂರು ನಗರಕ್ಕೆ ತೀರಾ ಹತ್ತಿರದಲ್ಲಿರುವ ಇದು, ಸಮುದ್ರಮಟ್ಟದಿಂದ ೧,೦೬೩ ಮೀ ಎತ್ತರದಲ್ಲಿದೆ. ಈ ಹಿಂದೆ ಮರ್ಬ್ಬಳ ತೀರ್ಥವೆಂದು ಕರೆಯಲ್ಪಡುವ ಈ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯ ಮತ್ತು ಮಹಿಷಾಸುರ ಮೂರ್ತಿಗಳು ಇವೆ. ಸಾವಿರ ಮೆಟ್ಟಿಲುಗಳನ್ನು ಹೊಂದಿರುವ ಈ ಬೆಟ್ಟದ ೭೦೦ನೇ ಮೆಟ್ಟಿಲ ಬಳಿ ಕರ್ನಾಟಕದ ಬೃಹತ್ ನಂದಿ ವಿಗ್ರಹವಿದೆ.

೮)ಕೊಡಚಾದ್ರಿ: ಈ ಬೆಟ್ಟವು ಸಮುದ್ರಮಟ್ಟದಿಂದ ೧,೩೪೪ ಮೀ ಎತ್ತರದಲ್ಲಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ನಿಸರ್ಗ ಸೌಂದರ್ಯಕ್ಕೆ ತುಂಬಾ ಹೆಸರುವಾಸಿಯಾಗಿದೆ.

೯) ಶಿವಗಂಗೆ: ಮಾಗಡಿ ಕೆಂಪೇಗೌಡನಿಂದ ಸ್ಥಾಪಿತವಾದ ಪವಿತ್ರ ಕ್ಷೇತ್ರವಾದ ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿದೆ. ಈ ಕ್ಷೇತ್ರದಲ್ಲಿ ಶಾರದ, ಹೊನ್ನಾದೇವಿ, ಶಾಂತೇಶ್ವರ, ಪ್ರಸನ್ನ ಗಂಗಾಧರೇಶ್ವರ ಮುಂತಾದ ದೇವಾಲಯಗಳಿವೆ.

೧೦) ಆದಿಚುಂಚನಗಿರಿ: ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲ್ಲೂಕಿನಲ್ಲಿರುವ ಈ ಬೆಟ್ಟದಲ್ಲಿ ಬೈರವೇಶ್ವರ ದೇವಸ್ಥಾನ ಮತ್ತು ಆದಿಚುಂಚನಗಿರಿ ಮಠಗಳಿವೆ.

೧೧) ಕುಮಾರಸ್ವಾಮಿ ಬೆಟ್ಟ: ಬಳ್ಳಾರಿ ಜಿಲ್ಲೆಯ, ಸಂಡೂರು ತಾಲ್ಲೂಕಿನಲ್ಲಿರುವ ಈ ಬೆಟ್ಟದ ಮೇಲೆ ಶ್ರೀಕುಮಾರಸ್ವಾಮಿ ದೇವಾಲಯವಿದೆ.

No comments:

Post a Comment